ಕೋಟ ; ರಾಷ್ಟ್ರೀಯ ಹೆದ್ದಾರಿಯಲ್ಲಿ ಕತ್ತಿ ಹಿಡಿದು ಯುವಕನ ಹುಚ್ಚಾಟ

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಕೋಟ ಸಮೀಪ ಹೆದ್ದಾರಿ ಮಧ್ಯೆ ಟೇಬಲ್ ಇಟ್ಟು, ಟಿವಿ ಹಾಗೂ ಸಂಗೀತ ವ್ಯವಸ್ಥೆ ಅಳವಡಿಸಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದಡಿ ಯುವಕನನ್ನು ಕೋಟ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಬೆಲ್ಲದ ಗಣಪತಿ ದೇವಸ್ಥಾನ ಸಮೀಪದ ನಿವಾಸಿ ರಂಜಿತ್ ಸೋಮಯಾಜಿ (25) ಎಂದು ಗುರುತಿಸಲಾಗಿದೆ.
ಸೋಮವಾರ ಯುವಕ ಹೆದ್ದಾರಿ ಮಧ್ಯೆ ಟೇಬಲ್ ಇಟ್ಟು ಟಿವಿ ಹಾಗೂ ಮ್ಯೂಸಿಕ್ ವ್ಯವಸ್ಥೆ ಹಾಕಿ ವಾಹನಗಳನ್ನು ತಡೆದಿದ್ದರಿಂದ ಕೆಲಕಾಲ ವಾಹನ ಸವಾರರು ಆತಂಕಕ್ಕೊಳಗಾದರು. ಉದ್ದನೆಯ ತಲೆಕೂದಲು ಮತ್ತು ಗಡ್ಡ ಹೊಂದಿದ್ದ ಯುವಕನ ವರ್ತನೆ ಕಂಡು ಸ್ಥಳೀಯರು ತಕ್ಷಣ ಕೋಟ ಪೊಲೀಸರಿಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಆಗಮಿಸಿದ ಪೊಲೀಸರ ಮೇಲೆಯೂ ರಂಜಿತ್ ಕತ್ತಿ ಬೀಸಿ ಹಲ್ಲೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.

ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದರು.ಪ್ರಾಥಮಿಕ ವಿಚಾರಣೆಯಲ್ಲಿ ಯುವಕ ಮಾನಸಿಕ ಅಸ್ವಸ್ಥನಾಗಿರಬಹುದೆಂಬ ಅನುಮಾನ ವ್ಯಕ್ತವಾಗಿತ್ತು. ಆದರೆ ಮಾನಸಿಕ ಚಿಕಿತ್ಸೆಗೆ ಒಳಗಾಗಿರುವ ಕುರಿತು ಯಾವುದೇ ದಾಖಲೆಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Related Articles