ಪಂಜಾಬ್ ನಿಂದ ಡೇವಿಡ್ ಶೂಟ್ ಔಟ್ ಗೆ ಸುಫಾರಿ..!! ಜೈಲಿನಿಂದ ಪ್ರಿನ್ಸ್ ಮಾಲಕ ಹತ್ಯಗೆ ಪ್ಲಾನ್..! ನಡಿತಾ..

ಉಡುಪಿ: ಪ್ರತಿಯೊಬ್ಬ ಉದ್ಯಮಿಯೂ ಲಾಭಕ್ಕಾಗಿಯೇ ಉದ್ಯಮ ನಡೆಸುತ್ತಾನೆ. ತನ್ನ ಉದ್ಯಮದ ಸಾಮ್ರಾಜ್ಯವನ್ನು ವಿಸ್ತರಿಸುವ ಸಲುವಾಗಿ ಹೊರರಾಜ್ಯಗಳ ಯೋಜನೆಗಳ ಗುತ್ತಿಗೆಯನ್ನು ಪಡೆಯುತ್ತಾರೆ. ಅಲ್ಲಿ ಸ್ಥಳೀಯರ ಸಹಕಾರವಿಲ್ಲದೇ ಉದ್ಯಮ ನಡೆಸಲು ಕಷ್ಟ ಎಂದಾಗ, ಸ್ಥಳೀಯವಾಗಿ ಮುಂಚೂಣಿಯಲ್ಲಿರುವ ನಾಯಕನೇ ಕಂಪೆನಿಯ ಮುಖ್ಯಸ್ಥರ ಗಮನ ಸೆಳೆಯುವುದು. ಹೀಗೆ ಮುದರಂಗಡಿಯಲ್ಲಿ ಯುಪಿಸಿಎಲ್ ಕಂಪೆನಿಯ ಗಮನಸೆಳೆದಾತ ಡೇವಿಡ್ ಡಿಸೋಜಾ. ಯುಪಿಸಿಎಲ್ ವಿರುದ್ದದ ಹೋರಾಟದಲ್ಲಿ ಪರಿಸರಪ್ರೇಮಿಗಳೊಂದಿಗೆ ಗುರುತಿಸಿಕೊಂಡು, ನಂತರ ಕಂಪೆನಿಯ ಪರವಾಗಿ ಕೆಲಸ ಮಾಡಿ, ಅಲ್ಲಿಯ ಗುತ್ತಿಗೆಗಳನ್ನು ಪಡೆದು ತನ್ನ ಖಜಾನೆ ತುಂಬಿಸಿಕೊಳ್ಳುತ್ತಿದ್ದ. ಆದರೆ ತನ್ನ ಸಾವು ಹೀಗೆ ಬರಬಹುದು ಎಂಬ ಊಹೆಯೂ ಆತನಿಗೆ ಇರಲಿಕ್ಕಿಲ್ಲ. ದಶಕಗಳಿಂದ ಯುಪಿಸಿಎಲ್‌ನಲ್ಲಿ ಒಂದಾದ ನಂತರ ಒಂದು ಕಾಮಗಾರಿಯ ಗುತ್ತಿಗೆಯನ್ನು ಪಡೆಯುತ್ತಾ, ಅದರ ಫಲವನ್ನು ಅನುಭವಿಸಿದನು ಇದೇ ಡೇವಿಡ್. ಮೂಲಗಳ ಮಾಹಿತಿಯ ಪ್ರಕಾರ ಪಂಜಾಬ್ ರಾಜ್ಯದ ಲೂಧಿಯಾನದ ಕಂಪೆನಿಯೊಂದಿಗೆ ಹಣದ ವಿಚಾರಕ್ಕೆ ಸಾಕಷ್ಟು ಗೊಂದಲ ಉಂಟಾಗಿತ್ತು. ಹೀಗಾಗಿ ಈ ಕಂಪೆನಿಯವರೇ ಡೇವಿಡ್ ಹೆಣ ಉರುಳಿಸಲು ಷರಾ ಬರೆದಿರಬೇಕು ಎಂಬ ಬಗ್ಗೆ ಖಾಕಿ ಬಲವಾದ ಅನುಮಾನ ವ್ಯಕ್ತಪಡಿಸಿದ್ದು, ತನಿಖೆ ಪ್ರಗತಿಯಲ್ಲಿದೆ.

ಥಾಣಾದ ಜೈಲಿನಲ್ಲಿ ಫೀಲ್ಡ್ ಸೆಟ್..?

ಮಹಾರಾಷ್ಟ್ರದ ಥಾಣೆ ಜೈಲಿನಲ್ಲಿರುವ ಕುಖ್ಯಾತ ಖೈದಿಯೂ ಡೇವಿಡ್‌ನ ಹತ್ಯೆಯ ಟೆಂಡರ್ ಪಡೆದಿದ್ದು, ಮೂವರು ಆರೋಪಿಗಳನ್ನು ಆತನೇ ಮುದುರಂಗಡಿಗೆ ಕಳುಹಿಸಿದ್ದಾನೆ. ಜೈಲೊಳಗೆ ಕುಳಿತು ಡೇವಿಡ್‌ನ ಇಷ್ಟದ “ಥಾರ್ ಕಾರಿ”ನ ಪಕ್ಕದಲ್ಲೇ ನೆತ್ತರು ಚೆಲ್ಲುವಂತೆ ಫೀಲ್ಡ್ ಸೆಟ್ಟ್ ಮಾಡಿದ್ದ ಎಂದು ಮೂಲಗಳು ತಿಳಿಸಿವೆ. ಲೂಧಿಯಾನದಲ್ಲಿ ವ್ಯಾವಹಾರಿಕ ದ್ವೇಷಕ್ಕೆ ಕೊಲೆ ಸಾಮಾನ್ಯ ₹2 ಕೋಟಿ ವ್ಯವಹಾರ ವಿವಾದ – 2026 ಲೂಧಿಯಾನ ಜಿಲ್ಲೆಯ ತಾಲ್ವಾರಾ ಗ್ರಾಮದ ಖಾಸಗಿ ಶೂಟಿಂಗ್ ರೇಂಜ್‌ನಲ್ಲಿ 24 ವರ್ಷದ MBA ವಿದ್ಯಾರ್ಥಿ ರಾಜ್‌ವೀರ್ ಸಿಂಗ್ ಗುಂಡೇಟಿಗೆ ಬಲಿಯಾದ ಪ್ರಕರಣ. ಪೊಲೀಸರು ಹೇಳಿರುವಂತೆ, ರಾಜ್‌ವೀರ್ ಮತ್ತು ಆತನ ಸ್ನೇಹಿತ ಜುಗಾಡ್ ಸಿಂಗ್ ಸೆಖೋನ್ ಸ್ಪೇರ್‌ಪಾರ್ಟ್ಸ್ ವ್ಯವಹಾರ ಆರಂಭಿಸಲು ತಲಾ ₹1 ಕೋಟಿ ಹೂಡಿಕೆ ಮಾಡಬೇಕಿತ್ತು. ಹಣದ ವಿಚಾರದಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದ ಬಳಿಕ ಶೂಟಿಂಗ್ ರೇಂಜ್‌ನಲ್ಲೇ ಗುಂಡು ಹಾರಿಸಲಾಗಿತ್ತು.

ಡೇವಿಡ್ ಕೊಲೆಯೂ ₹ 2 ಕೋಟಿ ವ್ಯವಹಾರಕ್ಕೆ ಸಂಬಂಧಿಸಿದ‌‌..!!

ಡೇವಿಡ್ ಕೊಲೆಯೂ ಅಂದಾಜು ₹ 2 ಕೋಟಿಯ ಹಣದ ವ್ಯವಹಾರ ಎಂದು ಜಿಲ್ಲಾ ಎಸ್ಪಿ ಹರಿರಾಂ ಶಂಕರ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ಹಣವನ್ನು ಯಾರು ಯಾರಿಗೆ ಕೊಡಬೇಕಿತ್ತು ಎಂಬುದು ತನಿಖೆಯಿಂದ ತಿಳಿಯಲಿದೆ ಎಂದು ತಿಳಿಸಿದ್ದರು. ಹಣ, ವ್ಯವಹಾರ ಮತ್ತು ಗುತ್ತಿಗೆಯ ಜಗತ್ತಿನಲ್ಲಿ ಮಾತಿನ ಬೆಲೆ ಕೋಟಿಗಳಲ್ಲಿ ಅಳೆಯಲ್ಪಡುತ್ತದೆ. ಆದರೆ ಆ ಮಾತೇ ತಪ್ಪಿದಾಗ, ಅದರ ಬೆಲೆ ಜೀವವಾಗುತ್ತದೆಯೇ ಎಂಬ ಪ್ರಶ್ನೆ ಇದೀಗ ಡೇವಿಡ್ ಡಿಸೋಜಾ ಹತ್ಯೆಯ ತನಿಖೆಯಲ್ಲಿ ಎದುರಾಗಿದೆ. ಲೂಧಿಯಾನದಲ್ಲಿ ಹುಟ್ಟಿಕೊಂಡಿರಬಹುದಾದ ವ್ಯವಹಾರಿಕ ವೈಮನಸ್ಸು, ಥಾಣೆ ಜೈಲಿನಲ್ಲಿರುವ ಆರೋಪಿಯ ಸಂಚು ಹಾಗೂ ಮುದರಂಗಡಿಯಲ್ಲಿ ನಡೆದ ಗುಂಡಿನ ದಾಳಿ—ಈ ಮೂರು ಕೊಂಡಿಗಳು ಒಂದಕ್ಕೊಂದು ಬೆಸೆದುಕೊಂಡಿವೆಯೇ? ಅಥವಾ ಡೇವಿಡ್ ಹತ್ಯೆಯ ಹಿಂದೆ ಮತ್ತೊಂದು ಕಾಣದ ಕೈ ಇದೆಯೇ?

ಜೈಲಿನ ಕಂಬಿಗಳ ಹಿಂದೆ ಕುಳಿತು ‘ಫೀಲ್ಡ್’ ಸಿದ್ಧಪಡಿಸಿದ ಮಾಸ್ಟರ್‌ಮೈಂಡ್ ಯಾರು? ಹಣದ ವ್ಯವಹಾರವೇ ಹತ್ಯೆಯ ಮೂಲ ಕಾರಣವೇ? ಡೇವಿಡ್‌ನ ಗುತ್ತಿಗೆ ಸಾಮ್ರಾಜ್ಯವೇ ಆತನಿಗೆ ಮುಳ್ಳಾಯಿತೇ?ಈ ಎಲ್ಲ ಪ್ರಶ್ನೆಗಳಿಗೆ ಖಾಕಿ ತನಿಖೆಯೇ ಉತ್ತರ ನೀಡಬೇಕಿದೆ. ಸದ್ಯಕ್ಕೆ ಅನುಮಾನಗಳ ಎಳೆಗಳು ಹಲವು ದಿಕ್ಕುಗಳಲ್ಲಿ ಸಾಗುತ್ತಿದ್ದು, ಒಂದೊಂದೇ ಕೊಂಡಿಯನ್ನು ಜೋಡಿಸುತ್ತಿರುವ ತನಿಖಾಧಿಕಾರಿಗಳ ಮುಂದೆ ಡೇವಿಡ್ ಹತ್ಯೆಯ ನಿಜವಾದ ‘ಮಾಸ್ಟರ್‌ಮೈಂಡ್’ ಯಾರು ಎಂಬುದೇ ದೊಡ್ಡ ಸವಾಲು.ಮಾತು ತಪ್ಪಿದವರ ಶಿಕ್ಷೆ ಸಾವು ಎಂಬುದು ಅಂಡರ್‌ವಲ್ಡ್‌ನ ನಿಯಮವಾಗಿದ್ದರೆ, ಡೇವಿಡ್ ಹತ್ಯೆಯ ಹಿಂದೆ ಆ ನಿಯಮವನ್ನು ಜಾರಿಗೆ ತಂದವರು ಯಾರು ಎಂಬುದನ್ನು ಕಾನೂನು ಬಯಲಿಗೆಳೆಯಬೇಕಿದೆ.

Related Articles